ಬಿಎಸ್‌ವೈಗೆ ಸಿಎಂ ಸ್ಥಾನದ ಆಸೆ ತೋರಿಸಿ ‘ಆಪರೇಷನ್ ಕಮಲ’ ಮಾಡಿಸಿದ್ದು ಯಾರು?: ಸಿದ್ದರಾಮಯ್ಯ

ಸಾಧನೆಯ ಬಲದಿಂದ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ನಿಮ್ಮದೇನಿದ್ದರೂ ‘ಆಪರೇಷನ್ ಕಮಲ’ದ ಹೊಲಸು ದಂಧೆ ಎಂದು ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Last Updated : Jul 11, 2022, 07:52 PM IST
  • ಸಾಧನೆಯ ಬಲದಿಂದ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ
  • ನಿಮ್ಮದೇನಿದ್ದರೂ ‘ಆಪರೇಷನ್ ಕಮಲ’ದ ಹೊಲಸು ದಂಧೆ ಎಂದು ಟೀಕಿಸಿದ ಸಿದ್ದರಾಮಯ್ಯ
  • ನಿಮ್ಮ ಊಟದ ಎಲೆಯಲ್ಲಿ ಸತ್ತು ಬಿದ್ದಿರುವ ಆನೆ ನೋಡಿ ಎಂದು ಪ್ರಹ್ಲಾದ್ ಜೋಶಿಗೆ ಸಿದ್ದರಾಮಯ್ಯ ಟಾಂಗ್
ಬಿಎಸ್‌ವೈಗೆ ಸಿಎಂ ಸ್ಥಾನದ ಆಸೆ ತೋರಿಸಿ ‘ಆಪರೇಷನ್ ಕಮಲ’ ಮಾಡಿಸಿದ್ದು ಯಾರು?: ಸಿದ್ದರಾಮಯ್ಯ    title=
ಪ್ರಹ್ಲಾದ್ ಜೋಶಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: 4 ದಶಕಗಳ ಕಾಲ ರಕ್ತ-ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್.ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದವರು ಯಾರು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪ್ರಶ್ನಿಸಿದ್ದಾರೆ. ಖರ್ಗೆ, ಪರಮೇಶ್ವರ್ ಮುಗಿಸಿರುವ ಸಿದ್ದು ಮುಂದಿನ ಗುರಿ ಡಿಕೆಶಿ. ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

#ಒಡೆದಮನೆಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಪಕ್ಷ ಅಧಿಕಾರದಲ್ಲಿದ್ದಾಗಲೇ ಬಿಎಸ್‍ವೈಯನ್ನು ಜೈಲಿಗೆ ಕಳಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾರ ಷಡ್ಯಂತ್ರ? ನೀವೂ ಅದರಲ್ಲಿ ಷಾಮೀಲಾಗಿಲ್ಲವೇ? ಯಡಿಯೂರಪ್ಪರಿಗೆ ಸಿಎಂ ಸ್ಥಾನದ ಆಸೆ ತೋರಿಸಿ, ಅವರಿಂದಲೇ ‘ಆಪರೇಷನ್ ಕಮಲ’ ಮಾಡಿಸಿದ್ದು ಯಾರು? ಕೊನೆಗೆ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು? ಕೈಗೆ ಬಂದದ್ದು ಬಾಯಿಗೆ ಬಾರದೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ? ಎಂದು ಜೋಶಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವ್ಯಾಪಾರಿ ಮನೋಭಾವದ ಶಿಕ್ಷಣ ಸಚಿವರನ್ನು ವಜಾಗೊಳಿಸಿ: ಮೋದಿಗೆ ಪತ್ರ ಬರೆದ ರುಪ್ಸಾ

‘ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿದಿನ ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವುದು ಯಾರ ಕುಮ್ಮಕ್ಕಿನಿಂದ? ಪಕ್ಷದ ಹಿರಿಯ ನಾಯಕನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳದಂತೆ ತಡೆಯುತ್ತಿರುವ ಕೈಗಳು ಯಾರದ್ದು ಪ್ರಹ್ಲಾದ್ ಜೋಶಿ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಯಡಿಯೂರಪ್ಪರ ಮಗ ವಿಜಯೇಂದ್ರನವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಲು ಪಂಚೆ ಎತ್ತಿಕಟ್ಟಿ ನಿಂತು ಸಂತೋಷ ಪಡುತ್ತಿರುವವರು ಯಾರು? ಆ ಸಂತೋಷದಲ್ಲಿ ಭಾಗಿಯಾಗಿರುವವರು ಯಾರು? ಹಗರಣಗಳಲ್ಲಿ ಅವರ ಹೆಸರನ್ನು ಸೋರಿಬಿಡುತ್ತಿರುವ ಸಂಚು ಯಾರದ್ದು? ಲಿಂಗಾಯತರನ್ನು, ಲಿಂಗಾಯತ ಮಠದ ಸ್ವಾಮಿಗಳನ್ನು ಓಲೈಸುತ್ತಾ ಪಕ್ಷ ಕಟ್ಟಿ ಈಗ ಪಕ್ಷದಲ್ಲಿರುವ ಒಬ್ಬೊಬ್ಬ ಲಿಂಗಾಯತರನ್ನು ಮೂಲೆಗುಂಪು ಮಾಡುತ್ತಿರುವುದು ಯಾರ ಕಾರಸ್ತಾನ? ಮುಖ್ಯಮಂತ್ರಿ ಸ್ಥಾನದ ಕನಸಿನಲ್ಲಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಶಾಸಕ ಅರವಿಂದ ಬೆಲ್ಲದರ ಆಸೆಗೆ ತಣ್ಣೀರೆರಚಿದ್ದು ಯಾರು ಪ್ರಹ್ಲಾದ್ ಜೋಶಿ?’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Bangalore Crime : ಮನೆಗೆಲಸ‌ ಮಾಡುವ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಬಾಂಬೆ ಲೇಡಿ ಗ್ಯಾಂಗ್ ಅರೆಸ್ಟ್!

‘ಮೊದಲ ಅಧಿಕಾರಾವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಮಾಡಿದ್ದ ಬಿಜೆಪಿ, 2ನೇ ಅವಧಿಯ ವರ್ಷ ಮುಗಿಯುವಷ್ಟರಲ್ಲಿ ಮೊದಲನೆಯವರನ್ನು ಪದಚ್ಯುತಿಗೊಳಿಸಿ 2ನೇ ಮುಖ್ಯಮಂತ್ರಿಯನ್ನು ಮಾಡಿತ್ತು. ಈಗ ಎರಡನೆಯವರನ್ನೂ ಇಳಿಸಿ ಮೂರನೆಯವರನ್ನು ಕೂರಿಸಲು  ಹೊರಟಿರುವ ನೀವು ಕಾಂಗ್ರೆಸ್ ಭಿನ್ನಮತದ ಬಗ್ಗೆ ಮಾತನಾಡುವುದು ತಮಾಷೆಯಾಗಿದೆ. ಸಾಧನೆಯ ಬಲದಿಂದ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ನಿಮ್ಮದೇನಿದ್ದರೂ ‘ಆಪರೇಷನ್ ಕಮಲ’ದ ಹೊಲಸು ದಂಧೆ. ಎದುರಿಗಿದ್ದವರ ಊಟದೆಲೆಯ ಮೇಲಿನ ಸತ್ತ ನೊಣವನ್ನು ಹುಡುಕುವ ಚಾಳಿ ಬಿಡಿ, ನಿಮ್ಮ ಊಟದ ಎಲೆಯಲ್ಲಿ ಸತ್ತು ಬಿದ್ದಿರುವ ಆನೆಯನ್ನು ನೋಡಿ’ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News